ಬಹುಶಃ ೮ ನೆಯ ಶತಮಾನದಿಂದಲೂ ಇಲ್ಲಿ ಸೀರೆ ತಯಾರಿಕೆ ಆರಂಭವಾಗಿರುವ ಕುರುಹುಗಳು ಸಿಗುತ್ತವೆ. ಬಳ್ಳಾರಿ ಮತ್ತು ಸುತ್ತಮುತ್ತಲ ಆಡಳಿತಗಾರರ ಪ್ರೋತ್ಸಾಹ ಹಾಗೂ ಒಲವಿನಿಂದ ಇಲ್ಲಿ ಸೀರೆ ಉದ್ಯಮ ತನ್ನ ನೆಲೆಯನ್ನು ಕಂಡಿತು. ಕಚ್ಚಾ ವಸ್ತುಗಳು ಸ್ಥಳೀಯವಾಗಿಗೆ ಲಭ್ಯವಿವೆ.ಹಬ್ಬ-ಹರಿದಿನಗಳಲ್ಲಿ ಈ ಸೀರೆಗೆ ವಿಶೇಷ ಗೌರವ ಸಲ್ಲುತ್ತಿತ್ತು.
ತಯಾರಿಕೆ
ಇಳಕಲ್ ಸೀರೆಗಳ ಅಂಚುಗಳು ೩ ಬಗೆಯದಾಗಿರುತ್ತವೆ. ೧. ಗೋಮಿ (‘ಇಳಕಲ್ ದಡಿ’ ಎಂಬುದು ಇದರ ಜನಪ್ರಿಯ ಹೆಸರು)
೨. ಪರಸ್ ಪೇಟ್ (ಚಿಕ್ಕ ಪರಸ್ ಮತ್ತು ದೊಡ್ಡಪರಸ್ ಎಂಬ ಎರಡು ಬಗೆಗಳಿವೆ).
೩. ಗಾಡಿ ಈ ಸೀರೆಗಳ ಮೈ ಅಥವಾ ಒಡಲುಗಳಲ್ಲಿ
ವಿನ್ಯಾಸಗಳನ್ನು ನಾವು ಕಾಣಬಹುದು
- ‘ಬಣ್ಣದ ಪಟ್ಟೆಗಳು’,
- ‘ಆಯತಾಕೃತಿ’, ಹಾಗೂ
- ‘ಚೌಕಳಿ ಆಕಾರದ ವಿನ್ಯಾಸ’ದವು
ಇದೇ ಈ ಉದ್ಯಮದ ಧನಾತ್ಮಕ ಅಂಶವೂ ಹೌದು. ಇಳಕಲ್ ನಲ್ಲಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ನೇಕಾರರು ಸೀರೆ ನೇಯ್ಗೆ, ಮತ್ತು ಅದಕ್ಕೆ ಸಂಬಂಧಿಸಿದ ಉದ್ಯಮದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅದರ ವಿನ್ಯಾಸ ಹಾಗೂ ನೇಯ್ಗೆಯ ವಿಶೇಷತೆಯೆಂದರೆ, ಸೀರೆಯ ಮೈಗೆ ಹತ್ತಿಎಳೆಗಳನ್ನು ಬಳಸಿದ ಬಾಗು,ಅಥವಾ ವಕ್ರ ಡೊಂಕು ನೇಯ್ಗೆ ವ್ಯವಸ್ಥೆ. ಸೀರೆಯ ಅಂಚಿಗೆ ಹಾಗೂ ಸೆರಗಿಗೆ ಕಚ್ಚಾ ರೇಷ್ಮೆಯ ನೂಲನ್ನು ಬಳಸುತ್ತಾರೆ. ಕೆಲವೊಮ್ಮೆ ಕಚ್ಚಾ ರೇಷ್ಮೆಯ ಬದಲಿಗೆ ಶುದ್ಧ ರೇಷ್ಮೆಯನ್ನು ಸಹಿತ ಬಳಸುತ್ತಾರೆ.
ಇಳಕಲ್ ಸೀರೆಗಳ ವಿಶಿಷ್ಟ್ಯ
೧. ಟೋಪಿ ತೆನೆ ಯೆಂಬ ತಂತ್ರದಿಂದ ಇಳಕಲ್ ಸೀರೆಗಳು, ತಯಾರಾಗುತ್ತವೆ. ಅಂದರೆ ನೇಯ್ಗೆಯನ್ನೇ ಮೂಲವಾಗಿ ಬಳಸಿಕೊಂಡು, ಹಲವಾರುಕೊಂಡಿ ಕುಣಿಕೆಗಳು ಗೊಣಸುಗಳನ್ನು ನಿರ್ಮಿಸಿಕೊಂಡು, ಸೀರೆಯ ಒಡಲಿನ ಭಾಗದ ನೇಯ್ಗೆಯನ್ನು ಸೆರಗಿನ ನೇಯ್ಗೆಯ ಜೊತೆ ಜೋಡಿಸುವ ವಿಶಿಶ್ಟ ಕಲೆ, ಹೆಣ್ಣುಮಕ್ಕಳಿಗೆ ಮುದಕೊಡುವಂತಹದು. ಈ ತಂತ್ರವನ್ನು ಬಳಸಿ ಒಬ್ಬ ನೇಕಾರ ೬, ೮, ೯ ಗಜದಷ್ಟು ಬಟ್ಟೆಯನ್ನು ಮಾತ್ರ ನೆಯುತ್ತಾನೆ. ನಂತರ ಈ ಮೂರು ಬೇರೆಬೇರೆ ಭಾಗಗಳನ್ನು ಒಟ್ಟಾಗಿ ಜೋಡಿಸಲು ಕೊಂಡಿ/ಗೊಣಸುತಂತ್ರದ ಬಳಕೆಯಗುತ್ತದೆ. ಗೌರವದ ಲಾಂಛನವನ್ನಾಗಿ ಪರಿಗಣಿಸಲಾಗಿದೆ. ಸೆರಗಿನ ವಿನ್ಯಾಸ ಒಂದು ಹೊಸಮಾದರಿಯದು. ತೋಪಿತೆನೆ ಸೀರೆಯ ಸೆರಗಿನಲ್ಲಿ ೩ ಪ್ರಮುಖ ಭಾಗಗಳನ್ನು ಕೆಂಪು ಬಣ್ಣದಲ್ಲಿ ಕಾಣಬಹುದು. ಎರಡು ಭಾಗಗಳ ಮಧ್ಯಭಾಗ ಬಿಳಿಬಣ್ಣದ್ದಾಗಿರುತ್ತದೆ.
ವೈಶಿಷ್ಟ್ಯ
ಹಬ್ಬ-ಹರಿದಿನಗಳಲ್ಲಿ ಈ ಸೀರೆಗೆ ವಿಶೇಷ ಗೌರವ ಸಲ್ಲುತ್ತಿತ್ತು. ಸೆರಗಿನ ತುದಿಯಲ್ಲಿ ಹೆಣಿಗೆ, ಕೋಟಿಕಂಬ್ಳಿ(ಕೋಟೆ ರಕ್ಷಕ), ಟೋಪಿ ತೆನೆ, ಜೋಳದ ತೆನೆ, ರಂಪ, (ಗಿರಿಶ್ರೇಣಿ) ಇತ್ಯಾದಿಗಳ ಹೆಣಿಗೆ ವಿನ್ಯಾಸಗಳಿತ್ತವೆ. ಸೀರೆಯ ಅಂಚು ವಿಶಾಲವಾಗಿ ೪ ರಿಂದ ೬ ಇಂಚಿನಷ್ಟು ಅಗಲವಿರುತ್ತದೆ. ಸಾಂಪ್ರದಾಯಿಕ ಸೀರೆಗಳಬಣ್ಣ ಸಾಮಾನ್ಯವಾಗಿ ಕೆಂಪು ಇಲ್ಲವೇ ಮರೂನ್ ಬಣ್ಣದ್ದಾಗಿರುತ್ತದೆ. ಗ್ರಾಹಕರು ದಾಳಿಂಬೆ ಕೆಂಪು, ಉಜ್ವಲ ನವಿಲು ಹಸಿರು ಬಣ್ಣ ಇಲ್ಲವೇ ಗಿಳಿ ಹಸುರಿನ ಸೀರೆಗಳನ್ನು ಸೂಚಿಸಿ ಪಡೆಯಬಹುದು. ಹತ್ತಿಯ ಸೀರೆಗಳೂ ಲಭ್ಯ. ಹತ್ತಿ-ರೇಷ್ಮೆ ಮಿಶ್ರದ ಸೀರೆಗಳೂ ದೊರೆಯುತ್ತವೆ. ಶುದ್ಧ ರೇಷ್ಮೆಯ ಸೀರೆಗಳನ್ನು ಗ್ರಾಹಕರು ಕೇಳಿ ಪಡೆಯಬಹುದು. ಮದುವೆ ಹೆಣ್ಣು ಧರಿಸಬಹುದಾದ ಇಳಕಲ್ ಧಾರೆ ಸೀರೆ ಕುಂಕುಮ ಬಣ್ಣದ್ದಾಗಿರುತ್ತದೆ. ಅರ್ಚಕರ ಮನೆಯವರು, ಹಾಗೂ ಪುರೋಹಿತರ ಮನೆಯ ಗೃಹಿಣಿಯರು ಇದೇ ಬಣ್ಣದ ಸೀರೆಯನ್ನು ಇಷ್ಟಪಡುತ್ತಾರೆ. ಆಧುನಿಕವಾಗಿ ತಯಾರಾಗುತ್ತಿರುವ ಒಂದು ನಮೂನೆ ಗಾಯತ್ರಿ ಯೆಂಬ ಸೀರೆಗೆ, ಹೊಸ ವಿನ್ಯಾಸದ, ೨.೫ ಇಂಚಿನಿಂದ ೪ ಇಂಚುಗಳವರೆಗಿನ ಕೆಂಪು ಅಥವ ‘ಮರೂನ್’ ಬಣ್ಣದ ಅಂಚನ್ನು ಕಾಣುತ್ತೇವೆ. ಇಳಕಲ್ ಸೀರೆಗಳ ಮತ್ತೊಂದು ಹೊಸವಿನ್ಯಾಸವೆಂದರೆ, ಒಡಲಿನ ಮೇಲೆ ‘ಕಮಲದ ಹೂ’, ‘ಆನೆ’, ‘ಪಲ್ಲಕ್ಕಿ’ ಇತ್ಯಾದಿ ಕಸೂತಿ ಚಿತ್ರಗಳ ಹೆಣಿಗೆ ೯ ಗಗಳ ಸೀರೆ,ಸೆರಗಿಗೆ ದೇವಸ್ಥಾನದಗೋಪುರಗಳ ವಿನ್ಯಾಸವಿರುತ್ತದೆ. ಸೆರಗುಗಳು ಸಾಮಾನ್ಯವಾಗಿ ಕೆಂಪುಬಣ್ಣದ ರೇಷ್ಮೆ ದಾರಗಳಿಂದ ನೇಯ್ಗೆಯಾದರೆ, ಅದಕ್ಕೊಪ್ಪುವಂತೆ, ಬಿಳಿಯ ಚಿತ್ರಾಲಂಕಾರವನ್ನೂ ನಾವು ಕಾಣುತ್ತೇವೆ.
ಈ ಶತಮಾನದ ಕೊನೆಯಲ್ಲಿ ಇಳಕಲ್ಲ ಪರಂಪರೆಯ ಚಿತ್ರಣವನ್ನು ಕೇವಲ ನೇಕಾರಿಕೆ ದೃಷ್ಟಿಕೋನದಿಂದಲ್ಲದೆ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ದಾಖಲಿಸುವುದು ಕಾಲದ ಅಗತ್ಯವಾಗಿದೆ. ಏಕೆಂದರೆ ಇಲ್ಲಿಯ ಸೀರೆಯ ಉದ್ಯಮದ ಮೇಲೆ ಈ ಎಲ್ಲ ಬಹುಮುಖಿ ಅಂಶಗಳು ಪ್ರಭಾವ ಬೀರಿವೆ.
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ಲ ಪಟ್ಟಣ ಒಂದು ಕಾಲಕ್ಕೆ ಪಡಮೂಲೆ ಸ್ಥಳವಾಗಿತ್ತು. ಮುಂಬೈ ಕರ್ನಾಟಕ ಹಾಗೂ ಹೈದರಾಬಾದ ಕರ್ನಾಟಕದ ಮಿಶ್ರ ಭಾಷೆ ಹಾಗೂ ಸಂಸ್ಕೃತಿಯನ್ನು ಪಳೆಯುಳಿಕೆ ರೂಪದಲ್ಲಿ ಇಂದಿಗೂ ಇಲ್ಲಿ ಕಾಣಬಹುದು. ೧೯೯೯ ರಲ್ಲಿ ಜಿಲ್ಲೆಗಳ ಪುನರ್ ವಿಂಗಡಣೆ ಆದ ನಂತರ ವಿಜಾಪುರದಿಂದ ಹೊಸ ಜಿಲ್ಲೆ ಬಾಗಲಕೋಟೆಗೆ ಆಡಳಿತಾತ್ಮಕವಾಗಿ ಇದು ವರ್ಗಾಯಿಸಲ್ಪಟ್ಟಿದೆ. ಗದಗ, ಕೊಪ್ಪಳ, ರಾಯಚೂರ ಜಿಲ್ಲೆಗಳ ಗಡಿಗಳಿಂದ ಇದು ಆವೃತ್ತವಾಗಿದೆ. ಸರಾಸರಿ ೧೫’ ವಾರ್ಷಿಕ ಮಳೆ ಪಡೆಯುವ ಬಯಲು ಪ್ರದೇಶದ ಈ ಪಟ್ಟಣ ಉಷ್ಣ ಹವಾಮಾನ ಹೊಂದಿದೆ. ಪ್ರಾಚಿನ ನಾಗರಿಕತೆಗಳು ಹಳ್ಳ, ತೊರೆ, ನದಿ ದಂಡೆಯ ಮೇಲೆ ವಿಕಾಸವಾದಂತೆ ಇಳಕಲ್ಲ ಪಟ್ಟಣದ ಬಹುಭಾಗ ಹಿರೇಹಳ್ಳ ಹಾಗೂ ಸುಡಗಾಡಿಹಳ್ಳಗಳಿಂದ ಸುತ್ತು ವರಿದಿದೆ. ಈ ಹಳ್ಳದ ನೀರು ಒಂದು ಕಾಲಕ್ಕೆ ನೇಕಾರಿಕೆ ಉದ್ಯಮದ ಜೀವ ಸೆಲೆಯಾಗಿತ್ತು. ೧೯೬೮ ರಲ್ಲಿಯೇ ಶತಮಾನೋತ್ಸವ ಆಚರಿಸಿಕೊಂಡ ನಗರಸಭೆ ಈ ಪಟ್ಟಣಕ್ಕಿದೆ.
ಇಳಕಲ್ಲ ಹಾಗೂ ಇಲಕಲ್ಲ ಎಂಬ ಎರಡೂ ಹೆಸರುಗಳು ಈ ಪಟ್ಟಣಕ್ಕೆ ಪ್ರಚಲಿತವಾಗಿ ಬಳಕೆಯಲ್ಲಿವೆ. ಹೆಸರಿನ ನಿಷ್ಪತ್ತಿಯ ಬಗ್ಗೆ ಯಾವುದೆ ಐತಿಹಾಸಿಕ ಖಚಿತ ದಾಖಲೆಗಳು ಇಲ್ಲ. ಭೌಗೋಳಿಕ ಸಂದರ್ಭದ ಹಿನ್ನೆಲೆಯಲ್ಲಿ ಮಾತ್ರ ಇಳಕಲ್ಲ ಹೆಸರನ್ನು ಅರ್ಥೈಸಬಹುದು. ಈ ಪಟ್ಟಣದ ಸುತ್ತಲು ಎತ್ತರದ ದಿಣ್ಣೆಯ ಪ್ರದೇಶ ಇದೆ. ಈ ದಿಣ್ಣೆಯ ಇಳಿಜಾರಿನಲ್ಲಿ ಈ ಪಟ್ಟಣ ಇರುವುದರಿಂದ ಇಳಕಲ ಶಬ್ದವೆ ‘ಇಳಕಲ್ಲ’ ‘ಇಲಕಲ್ಲ’ ಆಗಿ ಪ್ರಚಲಿತ ಇರಬಹುದು.
ಇತಿಹಾಸದ ಜಾಡು ಹಿಡಿದು ಈ ಪ್ರದೇಶ ವರ್ಣಿಸಲು ಯಾವುದೇ ಪ್ರಾಚೀನ, ಶಾಸನ, ಸ್ಮಾರಕಗಳು ಇಲ್ಲಿ ಲಭ್ಯವಾಗಿಲ್ಲ. ಇತಿಹಾಸ ಎಂದರೆ ಕೇವಲ ದೊರೆಗಳ ಅಥವಾ ರಾಜರಾಣಿಯರ ವರ್ಣನೆ ಆಗಿರುವುದರಿಂದ ಜನಮುಖಿಯಾದ ಇತಿಹಾಸ ಈಗ ಬರೆಯಬೇಕಾಗಿದೆ. ಈ ಊರಿನಲ್ಲಿ ಕಿಲ್ಲಾ ಎಂಬ ಭಾಗವಿದೆ. ಅದನ್ನೇ ಹಳೆ ಇಳಕಲ್ಲ ಎಂದು ಕರೆಯುತ್ತಾರೆ. ಅಲ್ಲಿ ವಾಸಿಸುವವರು ಕೇವಲ ಲಿಂಗಾಯತರು. ಅವರೆಲ್ಲ ಕೃಷಿಕರು. ಅಲ್ಲಿ ಈಶ್ವರ, ಮಲ್ಲಿಕಾರ್ಜುನ ಹಾಗೂ ಮಾರುತಿ ದೇವಾಲಯಗಳಿವೆ. ಈ ಕಿಲ್ಲಾ ಭಾಗದ ಹೊರಗೆ ನೇಕಾರಿಕೆ ಅವಲಂಬಿಸಿದ ಸಮುದಾಯಗಳು ವಾಸಿಸುತ್ತವೆ. ಆದ್ದರಿಂದ ನೇಕಾರಿಕೆ ಇಲ್ಲಿ ವಲಸಿಗರಿಂದ ಪ್ರಾರಂಭವಾಗಿರಬಹುದು ಎಂದು ಊಹಿಸಬಹುದು.
ಇಳಕಲ್ಲಿನಿಂದ ಐದಾರು ಕಿಲೋಮೀಟರ ದಕ್ಷಿಣಕ್ಕೆ ಬಲಕುಂದಿ ಗ್ರಾಮ ಇದೆ. ಅಲ್ಲಿ ಕೋಟೆಗೋಡೆ, ಹುಡೆಗಳಿವೆ. ಅದೊಂದು ಜಹಗೀರ ಗ್ರಾಮ ಎಂದು ಹೇಳುತ್ತಾರೆ. ವಿಜಯನಗರ ಸಾಮ್ರಾಜ್ಯ ಹಾಗೂ ಬಹಮನಿ ಸಾಮ್ರಾಜ್ಯಗಳ ನಡುವೆ ಕೃಷ್ಣೆಯ ತಟಾಕದಲ್ಲಿ ಜರುಗಿದ ರಕ್ಕಸಗಿ, ತಂಗಡಗಿ ಕಾಳಗ ಈ ಪ್ರದೇಶದಿಂದ ಸುಮರು ೨೫ ಕಿ.ಮೀ. ಅಂತರದಲ್ಲಿದೆ. ಆದ್ದರಿಂದ ಸುತ್ತಲಿನ ಸಾಮ್ರಾಜ್ಯಗಳ ಏರಿಳಿತ ಹಾಗೂ ಬದಲಾವಣೆಗಳ ಭಾಗವಾಗಿ ಈ ಪ್ರದೇಶ ಉಳಿದಿತ್ತು ಎಂದು ಮಾತ್ರ ಹೇಳಬಹುದು. ಚಾಲುಕ್ಯ, ರಟ್ಟ, ಬಹಮನಿ, ವಿಜಯನಗರ, ಮೊಘಲ, ಮರಾಠ, ಪೇಶ್ವೆ ಹಾಗೂ ಬ್ರಿಟಿಷ್ ಆಡಳಿತದ ನೆರಳಾಗಿ ಈ ಪ್ರದೇಶ ಉಳಿದಿರಬಹುದು. ಧಾರವಾಡ, ಬೆಳಗಾಂವಿ, ಕಲಾದಗಿ, ವಿಜಾಪುರ ಹಾಗೂ ಬಾಗಲಕೋಟ ಜಿಲ್ಲೆಗಳ ಆಡಳಿತಕ್ಕೆ ಒಳಪಟ್ಟ ಈ ಪಟ್ಟಣ ಯಾವಾಗಲೂ ಹುನಗುಂದ ತಾಲೂಕಿನಲ್ಲಿಯೇ ಇದೆ. ಇಲ್ಲಿ ಹೇಳಿಕೊಳ್ಳಬಹುದಾದ ಹಳೆಯ ಸ್ಮಾರಕಗಳೆಂದರೆ ಬಸವತತ್ವ ಪರಂಪರೆಯ ವಿಜಯ ಮಹಾಂತೇಶ್ವರ ಮಠ ಹಾಗೂ ಔಲಿಯ ಪರಂಪರೆಯ ಮರ್ತುಜ ಖಾದ್ರಿ ದರ್ಗಾ. ದರ್ಗಾ ಕೂಡ ಹಿಂದೂ ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿದೆ.
ಪಡಮೂಲೆ ಸ್ಥಳವಾಗಿದ್ದ ಇಳಕಲ್ಲ ಸುಮಾರು ೪೦ ವರ್ಷಗಳ ಹಿಂದೆ ಅತಿವೃಷ್ಟಿಯಾದಾಗ ದ್ವೀಪವಾಗಿ ನರಳಿದ ಪ್ರಸಂಗ ಮರೆಯುವಮತಿಲ್ಲ. ಕಮತಗಿ ಬಳಿ ಮಲಪ್ರಭೆ, ಧನ್ನೂರ ಬಳಿ ಕೃಷ್ಣೆ ಹಾಗೂ ಇಳಕಲ್ಲ ಸುತ್ತಲು ಇರುವ ಹಳ್ಳಗಳಿಗೆ ಸೇತುವೆಗಳು ನಿರ್ಮಾಣವಾಗುವ ಪೂರ್ವದಲ್ಲಿ ಈ ಪಟ್ಟಣ ಹೊರಜಗತ್ತಿನ ಸಂಪರ್ಕವನ್ನೇ ಒಮ್ಮೊಮ್ಮೆ ಕಳೆದುಕೊಳ್ಳುತ್ತಿತ್ತು. ಈ ಊರಿಗೆ ಮೊದಲು ಸಾರ್ವಜನಿಕ ಸಂಪರ್ಕ ಒದಗಿಸಿದ ಕೀರ್ತಿ ಹರವಿ ಹಾಗೂ ರಂಗರೇಜ್ ಬಂಧುಗಳಿಗೆ ಸಲ್ಲುತ್ತದೆ. ಹರವಿಯವರ ಗಾಡಿಯ ಕುಬೇರಪ್ಪ, ರಂಗರೇಜ್ ಗಾಡಿಯ ಈರಪ್ಪ ಎಂಬ ಚಾಲಕರ ಹೆಸರಿನಿಂದಲೆ ಈ ಮೋಟರಗಳು ಗುರುತಿಸಲ್ಪಡುತ್ತಿದ್ದವು. ಆದರೆ ಮಾಲಿಕರ ಹೆಸರಿನಿಂದಲ್ಲ. ಈ ಪಟ್ಟಣವನ್ನು ಆಧುನೀಕರಣಗೊಳಿಸಿದ ಕೀರ್ತಿ ಕಂಠಿ, ನಾಡಗೌಡ ಹಾಗೂ ಕಡಪಟ್ಟಿ ಯವರಿಗೆ ಸಲ್ಲುತ್ತದೆ.
ಇಳಕಲ್ಲ ಪಟ್ಟಣದ ಪರಂಪರೆಯೇ ವಿಶಿಷ್ಟವಾದದ್ದು. ಐದು ದಶಕಗಳ ಹಿಂದೆ ನಾರು, ಕ್ಷಯ, ಕುಷ್ಠರೋಗ ಇಲ್ಲಿ ಸಾಮಾನ್ಯವಾಗಿದ್ದವು. ಬೆಲ್ಲದ ಸಾದಾ ಚಹಾ, ಚೂರಮರಿ ಸೂಸಲ, ಮಿರ್ಚಿ, ಶಿಕಾರಿ ಚುಟ್ಟ ಇಲ್ಲಿಯ ಬಡ ನೇಕಾರನ ಜೀವನ ಶೈಲಿಯ ಸಂಕೇತಗಳಾಗಿದ್ದವು. ಎಲ್ಲರ ಮಾನ ಕಾಯಲು ಬಟ್ಟೆ ಉತ್ಪಾದಿಸುವ ನೇಕಾರನು ಒಂಟಿ ಧೋತರದಲ್ಲಿ ಹಿರೇ ಹಳ್ಳದಲ್ಲಿ ಸ್ನಾನ ಮಾಡಿ, ಅದನ್ನೇ ಒಗೆದು, ಒಣಗಿಸಿ ಮತ್ತೆ ಉಟ್ಟು ಹಳ್ಳದ ದಂಡೆಗಿರುವ ಮಹಾಂತ ಗದ್ದುಗೆಗೆ ಕೈ ಮುಗಿದು, ಬೆನ್ನು ಸೇರಿದ ಹೊಟ್ಟೆಗೆ ಅರೆ ಬರೆ ಉಂಡು, ತನ್ನ ನೇಕಾರಿಕೆ ವೃತ್ತಿಯಲ್ಲಿ ತೊಡಗುವ ಕಾಯಕ ಜೀವಿಯಾಗಿದ್ದ. ನೇಕಾರನ ಹೆಂಡತಿ ಬತ್ತಲೆ ಎಂಬಂತೆ, ‘ಧನಿ’ ಸಂಸ್ಕೃತಿಗೆ ನಲುಗಿ ನರಪೇತಲನಾಗಿದ್ದ. ಈ ಏಕತಾನ ಕಷ್ಟದ ಜೀವನದಲ್ಲಿಯೇ ಕಲೆ, ಸಂಗೀತ, ನಾಟಕಗಳತ್ತ ವಾಲಿದ ಪರಂಪರೆ ಇಲ್ಲಿದೆ.
ವೃತ್ತಿ ರಂಗಭೂಮಿ ಇಲ್ಲಿ ಜೀವಂತಿಕೆ ಪಡೆದಿತ್ತು. ಕಂಪನಿ ನಾಟಕಗಳಿಗೆ ಇಲ್ಲಿ ನಿರಂತರ ಆಶ್ರಯ ಇತ್ತು. ವೃತ್ತಿ ರಂಗಭೂಮಿಗೆ ಬೇಕಾಗುವ ಪರದೆ ಹಾಗೂ ಇತರ ಸಾಧನಗಳನ್ನು ರಚಿಸುವ ಕಲಾಕಾರರ ತಂಡವೇ ಇಲ್ಲಿತ್ತು. ನಾಡಿಗೆ ಖ್ಯಾತ ಕಲಾವಿದರನ್ನು ನೀಡಿದ ಕೀರ್ತಿ ಈ ಊರಿಗೆ ಸಲ್ಲುತ್ತದೆ. ಎಲ್ಲಿಯೋ ದಿವಾಳಿ ತೆಗೆದ ವೃತ್ತಿ ನಾಟಕ ಕಂಪನಿಗಳು ಇಲ್ಲಿ ಮರುಜನ್ಮ ಪಡೆದ ಇತಿಹಾಸ ಇದೆ. ಹವ್ಯಾಸಿ ಹಾಗೂ ವೃತ್ತಿ ರಂಗ ಭೂಮಿಯಲ್ಲಿ ಸ್ತ್ರೀ ಪತ್ರ ನಿರ್ವಹಿಸುವ ಪಾತರದವರ ಓಣಿಯು ಈ ಊರಲ್ಲಿದೆ.
ಧಾರ್ಮಿಕ ಚಟುವಟಿಕೆಗಳಿಗಾಗಿ ಓಣಿಗೆ ನಾಲ್ಕಾರು ಗುಡಿಗಳು ಈ ಊರಿನಲ್ಲಿವೆ. ನೇಕಾರರ ಆರಾಧ್ಯ ದೈವವಾದ ಬನಶಂಕರಿ ಗುಡಿಗಳಿಗಂತೂ ಇಲ್ಲಿ ಲೆಕ್ಕವೇ ಇಲ್ಲ. ವರ್ಷದುದ್ದಕ್ಕೂ ಈ ಊರಿನಲ್ಲಿ ಪುರಾಣ, ಪ್ರವಚನ, ಜಾತ್ರೆ, ಉತ್ಸವಗಳು ಜರುಗುತ್ತಲೇ ಇರುತ್ತವೆ. ಶ್ರಾವಣ ಮಾಸದ ಕೊನೆಯ ವಾರದಲ್ಲಿ ಜರುಗುವ ವಿಜಯ ಮಹಾಂತೇಶನ ತೇರು ಹಾಗೂ ಅಡ್ಡಪಲ್ಲಕ್ಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸ್ವರೂಪ ಪಡೆದುಕೊಂಡಿವೆ. ಫೆಬ್ರುವರಿಯಲ್ಲಿ ಜರುಗುವ ಮರ್ತುಜಾ ಖಾದ್ರಿ ಉರಸು ಪ್ರಾದೇಶಿಕ ಭಕ್ತರನ್ನು ಆಕರ್ಷಿಸುತ್ತದೆ. ಕೋಮು ಗಲಭೆಗಳಿಗೆ ಇದು ಹೊರತಾದ ಊರು. ಜಾತಿ, ಧರ್ಮ, ಅಂತರವಿಲ್ಲದೆ ಸಮಾಜದ ಎಲ್ಲ ಸ್ತರಗಳ ಜನ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇಕ್ಕಟ್ಟಾದ ಸಂದಿಗಳಿಗೆ ಈ ಊರು ಖ್ಯಾತ. ಹೊಸಬರಿಗೆ ಈ ಸಂದಿಗಳು ಚಕ್ರವ್ಯೂಹ ರಚಿಸಿಬಿಡುತ್ತವೆ. ಆದರೆ ಅಂತಹ ಸಂದಿಗಳಲ್ಲಿಯೇ ನೇಕಾರಿಕೆಗೆ ಹಾಗೂ ವ್ಯಾಪಾರಕ್ಕೆ ಅನುಕೂಲವಾಗುವ ವಿಶಾಲ ಭವ್ಯ ಮನೆಗಳಿವೆ.
೧೯೬೩ ರಿಂದ ಇಳಕಲ್ಲ ಉನ್ನತ ಶಿಕ್ಷಣದತ್ತ ದಾಪುಗಾಲು ಹಾಕಿದೆ. ಮೊದಲು ಇಲ್ಲಿ ನಗರಸಭೆಯ ಮಾಧ್ಯಮಿಕ ಶಾಲೆ ಮಾತ್ರ ಇತ್ತು. ಇಳಕ್ಲಲಿನವರೇ ಆದ ಶ್ರೀ ಎಸ್.ಆರ್. ಕಂಠಿಯವರು ಇಲ್ಲಿ ಕಾಲೇಜು ಪ್ರಾರಂಭಿಸಲು ಅಂಕುರ ಹಾಕಿದರು. ಗುರು ಮಹಾಂತಸ್ವಾಮಿಗಳು ಬೃಹತ್ ದೇಣಿಗೆ ನೀಡಿದರು. ನಗರಸಭೆ ಕಾಲೇಜಿಗೆ ಸ್ಥಳದಾನ ಮಾಡಿತು. ಇಲ್ಲಿಯ ಬಡ ನೇಕಾರ ತನ್ನ ಶಕ್ತ್ಯಾನುಸಾರ ದೇಣಿಗೆ ಕೊಟ್ಟನು. ಕರಡಿ ರಾಮಣ್ಣ ಎಂಬವರು ತಮ್ಮ ಒಡೆತನದಲ್ಲಿದ್ದ ಬಲಕುಂದಿ ಗುಡ್ಡವನ್ನೇ ಸಂಸ್ಥೆಗೆ ದಾನ ನೀಡಿದರು. ಬಿರಾಡ ಕೊಡಲಾರದ ರಾಮಣ್ಣ ಗುಡ್ಡವನ್ನು ನಮ್ಮ ಕೊರಳಿಗೆ ಕಟ್ಟಿದೆ ಎಂದು ಕಾಲೇಜ ಆಡಳಿತ ಮಂಡಳಿ ಆಗ ಗೊಣಗಿದ್ದು ಉಂಟು. ಸ್ಥಳೀಯ ಸಂಪನ್ಮೂಲಗಳ ಕೊರತೆ ಸರ್ಕಾರದ ಅತಂತ್ರ ನೀತಿ ಮೊದಲಾದ ಕಾರಣಗಳಿಂದ ಕಾಲೇಜ ಸಿಬ್ಬಮದಿಗೆ ಸಂಬಳ ಕೊಡಲಾರದ ಸ್ಥಿತಿ ಇಲ್ಲಿ ಉಂಟಾಗಿತ್ತು. ಇಳಕಲ್ಲ, ಹುನಗುಂದ, ಜಮಖಂಡಿ ಹಾಗೂ ಗುಳೇದಗುಡ್ಡದಂತಹ ಪಟ್ಟಣಗಳಲ್ಲಿ ಆರ್ಥಿಕ, ಸಂಕಷ್ಟದಲ್ಲಿದ್ದ ಕಾಲೇಜ ಸಿಬ್ಬಂದಿ ಸಂಘಟನೆ ಹೊಂದಿ ‘ಕವಿಕಾಶಿ’ ಕಟ್ಟಿದ್ದು ಈಗ ಇತಿಹಾಸ. ಇದೇ ಸಂದರ್ಭದಲ್ಲಿ ಇಳಕಲ್ಲ ಕಾಲೇಜಿನ ಆಗಿನ ಪ್ರಾಚಾರ್ಯರು ಬಲಕುಂದಿ ಗುಡ್ಡದ ಕಲ್ಲನ್ನು ಹಲವು ಪರೀಕ್ಷೆಗೊಳಪಡಿಸಿ ಅದು ಕೆಂಪು ‘ಗ್ಯ್ರಾನೈಟ್’ ಎಂಬುದನ್ನು ಖಾತರಿಪಡಿಸಿಕೊಂಡರು. ತಮಿಳುನಾಡು, ಗುಜರಾತ, ಗೋವಾಗಳಿಂದ ಉದ್ದಿಮೆದಾರರನ್ನು ಕೆಂಪು ಕಂಬಳಿ ಹಾಸಿ ಕರೆತಂದರು. ಇಳಕಲ್ಲಿನ ಈ ಕೆಂಪು ಕಲ್ಲು ವಿಶ್ವದ ಮಾರುಕಟ್ಟೆಯಲ್ಲಿ ಬಹುಬೇಗನೆ ಜನಪ್ರಿಯವಾಯಿತು. ಇಳಕಲ್ಲ ಚಾಕಲೆಟ್ ಎಂದೇ ಖ್ಯಾತವಾಯಿತು. ಕಲ್ಲಿನ ದಂಧೆ ಅನಾಯಾಸ ಲಾಭಗಳಿಸುವ ಆಕರ್ಷಕ ಉದ್ದಿಮೆಯಾಗಿ ಕಂಡಿತು. ಇದು ಇಳಕಲ್ಲಿನ ಆರ್ಥಿಕ ಸ್ಥಿತಿಯನ್ನೇ ಸಂಪೂರ್ಣ ಬದಲಿಸಿತು. ಸಂಪತ್ತು ಇಲ್ಲಿ ಸ್ಫೋಟಗೊಂಡಾಯಿತು. ಲಕ್ಷ್ಮೀ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಬರಲಿಲ್ಲ ಓಡುತ್ತಾ ಬಂದು ಇಲ್ಲಿ ಬಿದ್ದಂತಾಯಿತು. ಕೈ ಮಗ್ಗದ ಸೀರೆ ಉತ್ಪಾದಿಸುವ ಜವಳಿ ಉದ್ಯಮಕ್ಕೆ ಕೆಲಕಾಲ ಸ್ಥಾನಿಕ ಆತಂಕ ಇದು ಒಡ್ಡಿತು. ಹೊಸ ಶ್ರೀಮಂತ ವರ್ಗವನ್ನು ಕಲ್ಲಿನ ದಂಧೆ ಸೃಷ್ಟಿಸಿತು. ಬಡ ನೇಕಾರ ಈ ಮಿಂಚಿನ ಬದಲಾವಣೆಯಿಂದ ಗೊಂದಲಗೊಂಡ. ಭಾರತದ ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಲ್ಪಡುವ ಕಾರುಗಳು ಮೊದಲು ಇಳಕಲ್ಲಿಗೆ ಬರುತ್ತಿದ್ದವು ಎಂದರೆ, ಈ ಬದಲಾವಣೆಯ ತೀವ್ರತೆಯನ್ನು ಊಹಿಸಿಕೊಳ್ಳಬಹುದು. ಗುಡಿಸಲಿನ ವಾಸಿಗಳು ಕಲ್ಲಿನ ದಂಧೆಯಲ್ಲಿ ಅನಾಯಾಸ ಹಣಗಳಿಸಿ ಕೋಟಿಗಟ್ಟಲೆ ಖರ್ಚು ಮಾಡಿ ಮನೆ ಕಟ್ಟಿಸಿದರು. ‘ಮತ್ತೆ ‘ವಾಸ್ತು’ ಪ್ರಕಾರ ಅದನ್ನು ಬದಲಿಸಿದರು. ಅಂದರೆ ಕುರುಡು ಕಾಂಚಾಣದ ಕುಣಿತವನ್ನು ಊಹಿಸಬಹುದು. ಇದೇ ಸಂದರ್ಭದಲ್ಲಿ ಡಬ್ಲಿಂಗ್ ದೊರೆ ಇಲ್ಲಿ ಹುಟ್ಟಿಕೊಂಡ. ದಿಢೀರನೆ ಶ್ರೀಮಂತರಾಗುವ ದಾಹ ಹೆಚ್ಚಿತು. ಮೇಲ ಮಧ್ಯಮ ವರ್ಗ ವಿಶೇಷ ಆಕರ್ಷಿತರಾಗಿ ಡಬ್ಲಿಂಗ್ ದಂಧೆಯಲ್ಲಿ ಕೈ ಸುಟ್ಟುಕೊಂಡ ಉದಾಹರಣೆಗಳು ಹೇರಳ.
ಶತ-ಶತಮಾನಗಳಿಂದ ಸೀರೆ ಉದ್ದಿಮೆ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಜೀವಂತಿಕೆ ಪಡೆದ ಇಳಕಲ್ಲ ಈ ಶತಮಾನದ ಕೊನೆಯಲ್ಲಿ ಆರ್ಥಿಕ ವ್ಯವಹಾರಗಳ ಏರು ಪೇರು ಕಂಡು ಗೊಂದಲಗೊಂಡಿದೆ. ಈಗ ಇಳಕಲ್ಲ ತನ್ನ ಮೂಲ ಉದ್ಯೋಗ ಕೈಮಗ್ಗದ ಸೀರೆಯ ಉತ್ಪಾದನೆಯತ್ತ ಅನಿವಾರ್ಯವಾಗಿ ವಾಲುವ ಸ್ಥಿತಿ ತಲುಪಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಇಳಕಲ್ಲ ಸೀರೆ ಉದ್ಯಮದ ಏಳುಬೀಳುಗಳನ್ನು ಅವಲೋಕಿಸಬೇಕಾಗಿದೆ.